ಬಳ್ಕೂರು ಕೃಷ್ಣಯಾಜಿ ಮತ್ತು ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಯಕ್ಷರತ್ನ ಪ್ರಶಸ್ತಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಮಾರ್ಚ್ 27 , 2016
|
ಮಾರ್ಚ್ 27, 2016
|
ಬಳ್ಕೂರು ಕೃಷ್ಣಯಾಜಿ ಮತ್ತು ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಯಕ್ಷರತ್ನ ಪ್ರಶಸ್ತಿ
ಕುಂದಾಪುರ :
ಬಳ್ಕೂರು ಕೃಷ್ಣಯಾಜಿ :
ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದನಾಗಿ, ಪೌರಾಣಿಕ ಪ್ರಸಂಗದ ಗಂಡು ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ, ಪೌರಾಣಿಕ ಹಾಗೂ ಆದುನಿಕ ಪ್ರಸಂಗಗಳ ಪ್ರೇಕ್ಷಕರ ಮನೆಮಾತಾದ ಮೇರು ಕಲಾವಿದ ಬಳ್ಕೂರು ಕೃಷ್ಣ ಯಾಜಿಯವರು. ಪ್ರಸಂಗದ ಪ್ರಧಾನ ಪಾತ್ರಗಳಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ರಂಗದ ಹಿಡಿತ ಮತ್ತು ಗತ್ತುಗಾರಿಕೆಯನ್ನು ಇವರ ವೇಷಗಳಲ್ಲಿ ಗುರುತಿಸಬಹುದಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಡಗುಂಜಿ ಮೇಳದಲ್ಲಿ ಕೆರೆಮನೆ ಬ೦ಧುಗಳ ಮತ್ತು ಕುಂಜಾಲು ಹಾಸ್ಯಗಾರರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಯಾಜಿಯವರು ವಿನಮ್ರರಾಗಿ ನುಡಿಯುತ್ತಾರೆ.
ನಿರಂತರ 40 ವರ್ಷ ಬಡಗುತಿಟ್ಟು ರಂಗಸ್ಥಳವನ್ನು ಆಳಿದ ಇವರನ್ನು ರಂಗದ ರಾಜನೆಂದೇ ಜನ ಗುರುತಿಸಿದ್ದಾರೆ. ರಂಗಸ್ಥಳದಲ್ಲಿ ಒಂದೇ ರಾತ್ರಿಯಲ್ಲಿ ರಾಮನೂ ಆಗಬಲ್ಲ, ರಾವಣನೂ ಆಗಬಲ್ಲ, ಕೃಷ್ಣನೂ ಆಗಬಲ್ಲ ಕಂಸನೂ ಆಗಬಲ್ಲ, ಭೀಷ್ಮನೂ ಆಗಬಲ್ಲ ಪರಶುರಾಮ, ಸಾಲ್ವನೂ ಆಗಬಲ್ಲ, ಸ೦ಧಾನದ ಕೃಷ್ಣ ಕೌರವ ಎರಡು ಆಗಬಲ್ಲ, ಋತುಪರ್ಣನೂ ಆಗಬಲ್ಲ, ಬಾಹುಕನೂ ಆಗಬಲ್ಲ, ಸಮಗ್ರ ಭೀಷ್ಮದ ಮೂರೂ ಭೀಷ್ಮನಾಗಿ ವಿಭಿನ್ನವಾಗಿ ಅಭಿನಯಿಸಬಲ್ಲ ಸಮಕಾಲೀನ ಬೆರಳೆಣಿಕೆಯ ಕಲಾವಿದರಲ್ಲಿ ಯಾಜಿಯವರೂ ಒಬ್ಬರು ಎನ್ನುವುದನ್ನು ಪ್ರೇಕ್ಷಕರು ಒಪ್ಪಬಹುದಾದ ಸತ್ಯ. ಭೀಷ್ಮ ವಿಜಯದ ಭೀಷ್ಮ, ಧರ್ಮಾಂಗದ ದಿಗ್ವಿಜಯದ ಭರತ, ಶನೀಶ್ವರ ಮಹಾತ್ಮೆಯ ವಿಕ್ರಮಾದಿತ್ಯ, ಹೀಗೆ ಪಾತ್ರ ಯಾವುದೇ ಇರಲಿ ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಶಿಷ್ಟ ಕಲಾವಿದರಿವರು.
ಕೊಂಡದಕುಳಿ ರಾಮಚಂದ್ರ ಹೆಗಡೆ :
ಯಕ್ಷಗಾನದಲ್ಲಿ ಬರುವ ಪೌರಾಣಿಕ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವ ತುಂಬಿ ಆಧುನಿಕ ಪ್ರಸಂಗದಲ್ಲೂ ಹೊಸತನವನ್ನು ತುಂಬಿ ಬಡಾಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದರೆಂದು ಗುರುತಿಸಲ್ಪಡುವ ಕೊಂಡದಕುಳಿಯವರು ಸಿದ್ದಿ ಹಾಗೂ ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರು. ನಾಯಕ ಪ್ರತಿನಾಯಕ ಹಾಗೂ ಪುರುಷ ವೇಷಗಳಲ್ಲಿ ಸಮಾನ ಸಿದ್ದಿಯನ್ನು ಹೊಂದಿದ ಇವರು ಕೀಚಕ ವಧೆಯ ಕೀಚಕ, ವಲಲ, ರಾಮ, ರಾವಣ, ಗದಾಯುದ್ದದ ಕೌರವ, ಬೀಮ, ಕುಶಲವದ ರಾಮ, ಶತ್ರುಘ್ನ, ಕುಶ-ಲವ, ಸಮಗ್ರ ಭೀಷ್ಮದ ದೇವವ್ರತ, ಭೀಷ್ಮ, ಪರಶುರಾಮ, ಪರ್ವದ ಭೀಷ್ಮ ಹೀಗೆ ಪರಸ್ಪರ ವಿರುದ್ದ ನಿಲುವಿನ ಪಾತ್ರಗಳಿಗೂ ಜೀವತುಂಬಬಲ್ಲ ಅಪರೂಪದ ಕಲಾವಿದರು. ಅವರ ಸುಂದರವಾದ ಶರೀರ ಆಳಂಗ ಪುಂಡುವೇಷದಿಂದ ಎರಡನೇ ವೇಷದವರೆಗೆ ಯಾವ ವೇಷಕ್ಕೂ ಹೊಂದುವಂತಾದ್ದು.
ಉತ್ತರ ಕನ್ನಡ ಜಿಲ್ಲೆಯ ಕೊಂಡದಕುಳಿ ಎಂಬಲ್ಲಿ ಸುಸಂಸ್ಕ್ರುತ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ 1961ರಲ್ಲಿ ಗಣೇಶ ಹೆಗಡೆ ಮತ್ತು ಕಮಲ ದಂಪತಿಗಳ ಮಗನಾಗಿ ಜನಿಸಿದ ಹೆಗಡೆಯವರು ಪ್ರೌಢ ಶಿಕ್ಷಣವನ್ನು ಪೂರೈಸಿ ನಿಜಾರ್ಥದಲ್ಲಿ ಪ್ರೌಢರಾಗಿ ಇಡಗುಂಜಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ಗುಂಡಬಾಳ, ಅಮೃತೇಶ್ವರಿ, ಬಚ್ಚಗಾರು ಮೇಳದಲ್ಲಿ ತಿರುಗಾಟ ಮಾಡಿ ಕಾಳಿಂಗ ನಾವಡರ ಒಡನಾಡಿಯಾಗಿ 19 ವರ್ಷ ತಿರುಗಾಟ ಮಾಡಿ ಉತ್ತುಂಗಕ್ಕೆ ಏರಿದರು. ನಾರ್ಣಪ್ಪ ಉಪ್ಪೂರು, ನೆಬ್ಬೂರು ನಾರಾಯಣ ಭಾಗವತ, ಕಾಳಿಂಗ ನಾವಡರೊಂದಿಗೆ ತಿರುಗಾಟ ಮಾಡಿ ಕಾರ್ತವೀರ್ಯಾರ್ಜುನ, ಮಾಗಧ, ಕೃಷ್ಣ , ಬೀಷ್ಮ ಮುಂತಾದ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸದ್ಯ ತನ್ನದೇ ಸಂಸ್ಥೆ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಮೂಲಕ ಪ್ರದರ್ಶನ ನೀಡುತಿದ್ದ ಇವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ.
ಬಡಗು ತಿಟ್ಟಿನ ಈ ಇಬ್ಬರು ಮೇರು ಕಲಾವಿದರಿಗೆ ಯಕ್ಷ ರತ್ನ ಪ್ರಶಸ್ತಿ ಸ೦ದಿರುವುದು ಯೋಗ್ಯವಾಗಿದೆ.
|
|
|